
ನಟ ರಿಷಭ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಯನ್ ದೇವಯ್ಯ, ಪ್ರಕಾಶ್ ತುಮಿನಾಡು, ಮುಂತಾದವರು ಅಭಿನಯಿಸಿದ್ದಾರೆ.
ಹೊಂಬಾಳೆ ಫಿಲ್ಸ್ಂ ರವರು ನಿರ್ಮಾಣ ಮಾಡಿದ್ದಾರೆ.
ಚಿತ್ರದ ಕಥೆ: ಈ ಹಿಂದೆ ಬಂದಿದ್ದ ಕಾಂತಾರ ಚಿತ್ರದಲ್ಲಿ ದೈವ ಒಂದು ಜಾಗದಲ್ಲಿ ಮಾಯವಾಗುತ್ತದೆ.
ಚಿತ್ರದ ಕಥೆ ಇಲ್ಲಿಂದಲೆ ಪ್ರಾರಂಭವಾಗುತ್ತದೆ.
ದೈವ ನರ್ತಕನ ಮಗ ಆ ಜಾಗಕ್ಕೆ ಬಂದು ನನ್ನ ತಂದೆ ಈ ಜಾಗದಲ್ಲೆ ಏಕೆ ಮಾಯವಾಗಿದ್ದು ಎಂದು ಪ್ರಶ್ನಿಸುತ್ತಾನೆ.
ಆಗ ಹಿರಿಯರೊಬ್ಬರು ನಮ್ಮ ಹಿರಿಯರ ಮೂಲ ಜಾಗ ಇದೇ ಎಂದು ಹೇಳಿ ದಂತಕಥೆ ಪ್ರಾರಂಭ ಮಾಡುತ್ತಾರೆ.
ತುಳುನಾಡಿನ ಜನ ದೇವರಿಗಿಂತ ಹೆಚ್ಚಾಗಿ ದೈವಗಣವನ್ನು ಹೆಚ್ಚಾಗಿ ಆರಾಧಿಸುತ್ತಾರೆ.
ಈ ಗಣದಲ್ಲಿ ಪ್ರಮುಖವಾದವು ಪಂಜುರ್ಲಿ ಹಾಗು ಗುಳಿಗ.
ಕದಂಬರ ಕಾಲದಲ್ಲಿ ಒಂದು ಬಾವಿ ಸುತ್ತಲೂ ಕಾಡು. ಈ ಜಾಗವನ್ನು ಶಿವನ ಹೂದೋಟ ಎಂದು ಕರೆಯುತ್ತಿರುತ್ತಾರೆ, ಇದಕ್ಕಿರುವ ಮತ್ತೊಂದು ಹೆಸರೇ ಕಾಂತಾರ.
ಈ ಸಂದರ್ಭದಲ್ಲಿ ಅಲ್ಲಿನ ಸಾಮಂತ ರಾಜನಿಗೆ ಆ ಜಾಗದಲ್ಲಿ ಸಿಗುವ ಮಸಾಲ ಪದಾರ್ಥಗಳ ಮೇಲೆ ಕಣ್ಣು ಬೀಳುತ್ತದೆ, ಆ ಜಾಗವನ್ನು ವಶಪಡಿಸಿಕೊಳ್ಳಲು ಬಂದಾಗ ದೈವ ಅವನನ್ನು ಬಲಿ ತೆಗೆದುಕೊಳ್ಳುತ್ತದೆ.
ಇತ್ತ ಅದೇ ಹೂದೋಟದ ಬಾವಿಯಲ್ಲಿ ಮಗುವೊಂದು ಕಾಣಿಸುತ್ತದೆ, ಇದರ ಕಾವಲಿಗೆ ಹುಲಿಯೂ ಇರುತ್ತದೆ.
ಆಗ ಆ ಕಾಡಿನ ಜನ ಆ ಮಗುವನ್ನು ಸಾಕುತ್ತಾರೆ.
ಇತ್ತ ಕಡಪ ಕಡೆಯ ಮಂತ್ರವಾದಿಗಳ ಗುಂಪು ಶಿವನ ಹೂದೋಟದ ದೈವವನ್ನು ವಶಪಡಿಸಿಕೊಳ್ಳಲು ವಾಮಾಚಾರ ಪ್ರಯೋಗಿಸುತ್ತಾರೆ, ದೈವದ ಶಕ್ತಿಯ ಮುಂದೆ ಇವರ ಆಟ ನಡೆಯದೆ ಇದ್ದರೂ ತಮ್ಮ ಹಠ ಬಿಡದೆ ಕಾಡಿನ ಬೇರೊಂದು ಜಾಗದಲ್ಲಿ ಪ್ರಯತ್ನಿಸುತ್ತಾ ಇರುತ್ತಾರೆ. ಇದಕ್ಕಾಗಿ ಕಾಡುಪಾಪದ ಕಣ್ಣೀರಿನ ಅಂಜನದಿಂದ ದಿಗ್ಬಂಧನ ಮಾಡಿರುತ್ತಾರೆ.
ಇತ್ತ ಬಾವಿಯಲ್ಲಿ ಸಿಕ್ಕ ಮಗು ಬೆಳೆದು ದೊಡ್ಡವನಾಗಿರುತ್ತಾನೆ.
ಆತನೇ ಚಿತ್ರದ ನಾಯಕ.
ದೈವ ಬಲಿ ತೆಗೆದುಕೊಂಡ ರಾಜನ ವಂಶಸ್ಥರು ದೈವದ ಮೇಲೆ ಸೇಡು ತೀರಿಸಿಕೊಳ್ಳುತ್ತಾರಾ?
ಮಾಟಗಾರರು ಹಾಕಿದ್ದ ದಿಗ್ಬಂಧನವನ್ನು ನಾಯಕ ತೆಗೆಯುತ್ತಾನಾ?
ಶಿವಗಣಕ್ಕೆ ಆಪತ್ತು ಎದುರಾದಾಗ ಅದನ್ನು ರಕ್ಷಿಸಲು ಯಾರು ಬರುತ್ತಾರೆ, ಮುಂತಾದ ಪ್ರಶ್ನೆಗೆ ನೀವು ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಒಟ್ಟಾರೆ ಫಲಿತಾಂಶ: ರಾಜಮೌಳಿ ಚಿತ್ರದಲ್ಲಿ ಸಾವಿರ ಕೋಟಿ ಖರ್ಚು ಮಾಡಿ , ಅದ್ದೂರಿತನದಿಂದ ಪ್ರೇಕ್ಷಕರನ್ನು ಸೀಟಿನ ತುತ್ತ ತುದಿಗೆ ಕುಳಿತುಕೊಂಡು ಉಸಿರು ಬಿಗಿ ಹಿಡಿದುಕೊಂಡು ಚಿತ್ರ ನೋಡುವಂತೆ ಮಾಡುವ ತಂತ್ರಗಾರಿಕೆಯನ್ನು ನಮ್ಮ ರಿಷಭ್ ಶೆಟ್ರು 100 ಕೋಟಿ ಚಿತ್ರದಲ್ಲೇ ಮಾಡಿದ್ದಾರೆ.
ಈ ಹಿಂದೆ ಬಂದಂತ ಕಾಂತಾರ ಚಿತ್ರದಲ್ಲಿ ಇದ್ದಂತಹ ಗೂಸ್ ಬಂಪ್ ದೃಶ್ಯಗಳು ಈ ಚಿತ್ರದಲ್ಲಿ ಇವೆ, ಆದರೆ ಈ ಬಾರಿ ಗೂಸ್ ಬಂಪ್ ಆಗುವುದು ಹಿಂದಿನ ಚಿತ್ರದಲ್ಲಿ ಬಂದಂತಹ ದೃಶ್ಯಗಳಿಗೆ ಅಲ್ಲ ಈ ಬಾರಿ ಆ ಕ್ರೆಡಿಟ್ ಹುಲಿಗೆ ಹೋಗಿದೆ.
ರಿಷಭ್ ಶೆಟ್ರು ಈ ಭಾರಿಯೂ ಸಹ ರಾಷ್ಟ್ರ ಪ್ರಶಸ್ತಿ ಬಾಚಿಕೊಳ್ಳುವ ಸಾಧ್ಯತೆ ಇದೆ.
ರಥ ಉರುಳಿ ಬರುವ ದೃಶ್ಯವಂತೂ ರೊಮಾಂಚನಕಾರಿಯಾಗಿ ಮೂಡಿ ಬಂದಿದೆ.
ಚಿತ್ರದಲ್ಲಿ ಸಂಗೀತಕ್ಕಿಂತ ಹಿನ್ನಲೆ ಸಂಗೀತ ಅತ್ಯದ್ಬುತವಾಗಿದೆ.
ಎರಡು ಹಾಡುಗಳು ಇಂಪಾಗಿವೆ.
ರುಕ್ಮಿಣಿ ವಸಂತ್ ಅಚ್ಚರಿಯ ಅಭಿನಯ ನೀಡಿದ್ದಾರೆ, ರಿಷಭ್ ಶೆಟ್ರು ನಟನೆ ಹಾಗು ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡಿದ್ಧಾರೆ.
- ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.

ಕಥೆ ಗೆ ತಕ್ಕ ಕಲಾವಿದರ ಅಭಿನಯ ಅದ್ಧುತ