
ಸಾಹಸಸಿಂಹ, ಅಭಿನಯ ಭಾರ್ಗವ, ಡಾ. ವಿಷ್ಣುವರ್ದನ್ ರವರಿಗೆ ಈಗ ಮತ್ತೊಂದು ಪ್ರಶಸ್ತಿ ಸಂದಿದೆ. ಅದು ನಾಡಿನ ಪ್ರಮುಖ ಪ್ರಶಸ್ತಿಯಾದ “ಕರ್ನಾಟಕ ರತ್ನ” ಪ್ರಶಸ್ತಿ.
ಈ ಪ್ರಶಸ್ತಿ ಪ್ರಾರಂಭವಾಗಿದ್ದು 1992ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ.
ಆಗ ಪ್ರಾರಂಭಿಸಿದ ಈ ಪ್ರಶಸ್ತಿಯನ್ನು ಇಲ್ಲಿಯವರೆಗೆ ಒಟ್ಟು 12 ಜನರಿಗೆ ನೀಡಿ ಗೌರವಿಸಲಾಗಿದೆ.
1972ರಲ್ಲಿ ಸಂಪತ್ ಕುಮಾರ್ ಎಂಬ ಹೆಸರಿನ ಯುವಕ ಕನ್ನಡ ಚಿತ್ರರಂಗಕ್ಕೆ ʼವಂಶವೃಕ್ಷʼ ಎಂಬ ಚಿತ್ರದಿಂದ ಪಾದಾರ್ಪಣೆ ಮಾಡಿ, ʼನಾಗರಹಾವುʼ ಚಿತ್ರದಿಂದ ನಾಯಕನಾಗಿ ಮಿಂಚಿ ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ʼಮೇರುನಟʼನಿಗೆ ಈ ಪ್ರಶಸ್ತಿ ಬದುಕಿದ್ದಾಗಲೇ ಸಿಗಬೇಕಿತ್ತು. ಆ ಯೋಗ್ಯತೆ ಅವರಿಗಿತ್ತು, ಆದರೆ ಆಗ ಯೋಗ ಇರಲಿಲ್ಲ.
ಆ ಯೋಗ ಈಗ ಕೂಡಿ ಬಂದಿದೆ, ಸಮಾಧಿ ಸ್ಥಳ ಹೋಯಿತು ಎಂದಾಗಲೇ ಅದು ಮತ್ತೆ ಕೈ ಸೇರುವ ಸೂಚನೆ ಸಿಕ್ಕಿದೆ, ಅದೇ ರೀತಿ “ಕರ್ನಾಟಕ ರತ್ನ” ಪ್ರಶಸ್ತಿ ಸಿಕ್ಕಿದೆ.
ಇದೆಲ್ಲ ವಿಷ್ಣುವರ್ಧನ್ ರವರ ಜನ್ಮ ದಿನ (ಸೆಪ್ಟಂಬರ್ 18) ಹತ್ತಿರ ಇರುವಾಗಲೇ ಸಿಕ್ಕಿರುವುದು ಸಂತೋಷದ ವಿಷಯ.
ʼಸಿರಿವಂತʼ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಹಾಡಿನಲ್ಲಿ ಬರುವ ʼನನ್ನ ಹೊತ್ತು ನೆಡೆವ ಈ ಗುಣವಂತರು, ಬಂಧು ಬಳಗ ಅಲ್ಲ ಈ ಹೃದಯವಂತರು, ಬಂದು ಹೋಗೋ ನಡುವೆ ಸಂಬಂಧ ತಂದರುʼ ಈ ಸಾಲುಗಳು ತಮ್ಮ ಅಭಿಮಾನಿಗಳಿಗೆ ಹೇಳಿದಂತಿದೆ.
ಅವರ ಒಂದು ಚಿತ್ರದಲ್ಲಿ ಬರುವ ಸಂಭಾಷಣೆ ʼಕೊಲ್ಲೊಕೆ ಅಂತ ಒಬ್ಬ ಇದ್ರೆ, ಕಾಯೋಕೆ ಅಂತ ಮೇಲೊಬ್ಬ ಇರ್ತಾನೆʼ ಎಂಬ ಮಾತು ವಿಷ್ಣುವರ್ಧನ್ ರವರ ವಿಷಯದಲ್ಲಿ ನಿಜವಾಗಿಬಿಡ್ತು.

ಮತ್ತೊಂದು ವಿಶೇಷ ಏನೆಂದರೆ ಇತ್ತೀಚೆಗೆ ನಮ್ಮನ್ನ ಅಗಲಿದ ಹಿರಿಯ ಬಹುಬಾಷ ನಟಿ ಡಾ. ಬಿ.ಸರೋಜದೇವಿ ಅವರಿಗೂ ಮರಣೋತ್ತರ “ಕರ್ನಾಟಕ ರತ್ನ” ಪ್ರಶಸ್ತಿ ಸಂದಿರುವುದು ಸಂತೋಷದ ವಿಚಾರ.
ಇದುವರೆಗಿನ 12 “ಕರ್ನಾಟಕ ರತ್ನ” ಪ್ರಶಸ್ತಿ ಪುರಸ್ಕೃತರು…
1) ಕುವೆಂಪು (1992 ಸಾಹಿತ್ಯ)
2) ಡಾ. ರಾಜ್ ಕುಮಾರ್ (1992 ಸಿನಿಮಾ)
3) ಎಸ್. ನಿಜಲಿಂಗಪ್ಪ (1999 ರಾಜಕೀಯ)
4)ಸಿ.ಎನ್. ಆರ್. ರಾವ್ (2000 ವಿಜ್ಞಾನ)
5)ಡಾ. ದೇವಿಶೆಟ್ಟಿ (ವೈದ್ಯಕೀಯ 2001)
6) ಭೀಮ್ ಸೇನ್ ಜೋಶಿ (2005 ಸಂಗೀತ)
7) ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು (2007 ಸಾಮಾಜಿಕ ಸೇವೆ)
8) ದೇ.ಜವರೇಗೌಡ (2008 ಸಾಹಿತ್ಯ)
9) ಡಿ. ವೀರೇಂದ್ರ ಹೆಗ್ಗಡೆ (2009 ಸಾಮಾಜಿಕ ಸೇವೆ)
10) ಡಾ. ಪುನೀತ್ ರಾಜ್ ಕುಮಾರ್ (2022 ಸಿನಿಮಾ)
11) ಡಾ. ವಿಷ್ಣುವರ್ದನ್ (2025 ಸಿನಿಮಾ).
12) ಡಾ. ಬಿ.ಸರೋಜ ದೇವಿ (2025 ಸಿನಿಮಾ)
– ಆರ್. ರಾಘವೇಂದ್ರ ಜೆ.ಜಿ.ಹಳ್ಳಿ.
